1ದಾವೀದನು ಬೆಟ್ಟದ ತುದಿಯಿಂದ ಸ್ವಲ್ಪ ದೂರ ಹೋದಾಗ, ಮೆಫೀಬೋಶೆತನ ಸೇವಕ ಚೀಬನು ತಡಿಹಾಕಿದ ಎರಡು ಕತ್ತೆಗಳನ್ನು ಹೊಡೆದುಕೊಂಡು ಬಂದು, ಅವನನ್ನು ಎದುರುಗೊಂಡನು. ಅವುಗಳ ಮೇಲೆ ಇನ್ನೂರು ರೊಟ್ಟಿಗಳೂ, ಒಣಗಿದ ನೂರು ದ್ರಾಕ್ಷಿ ಗೊಂಚಲುಗಳೂ, ಬೇಸಿಗೆ ಕಾಲದ ನೂರು ಹಣ್ಣುಗಳೂ, ಒಂದು ಬುದ್ದಲಿ ದ್ರಾಕ್ಷಾರಸವೂ ಇದ್ದವು.
2ಅರಸನು ಚೀಬನಿಗೆ, “ಇವು ಏಕೆ,” ಎಂದನು.
3ಆಗ ಅರಸನು ಅವನನ್ನು, “ನಿನ್ನ ಯಜಮಾನನ ಪುತ್ರನು ಎಲ್ಲಿದ್ದಾನೆ?” ಎಂದು ಕೇಳಿದನು.
4ಆಗ ಅರಸನು ಚೀಬನಿಗೆ, “ಇಗೋ, ಮೆಫೀಬೋಶೆತನಿಗೆ ಉಂಟಾದದ್ದೆಲ್ಲವೂ ನಿನಗುಂಟಾಯಿತು,” ಎಂದನು.
5ಅರಸನಾದ ದಾವೀದನು ಬಹುರೀಮಿನವರೆಗೂ ಬಂದಾಗ, ಸೌಲನ ಗೋತ್ರದವನಾದ ಗೇರನ ಮಗ ಶಿಮ್ಮಿ ಎಂಬ ಹೆಸರುಳ್ಳ ಒಬ್ಬ ಮನುಷ್ಯನು ಅಲ್ಲಿಂದ ಹೊರಟು ದೂಷಿಸುತ್ತಾ ನಡೆದು ಬಂದನು.
6ದಾವೀದನ ಎಡಬಲದಲ್ಲಿ ಸೈನಿಕರೂ, ವಿಶೇಷ ಕಾವಲುಗಾರರೂ ಇದ್ದರು. ಆದರೂ ಶಿಮ್ಮಿಯು ದಾವೀದನ ಮೇಲೆಯೂ, ಅವನ ಅಧಿಕಾರಿಗಳ ಮೇಲೆಯೂ ಕಲ್ಲುಗಳನ್ನು ಎಸೆದನು.
7ಶಿಮ್ಮಿಯು ಅರಸನನ್ನು ದೂಷಿಸುತ್ತಾ, “ಕೊಲೆಗಾರನೇ, ನೀಚನೇ, ಹೊರಟು ಹೋಗು; ಹೊರಟು ಹೋಗು.
8ಯೆಹೋವ ದೇವರು ಸೌಲನ ಮನೆಯವರ ರಕ್ತವನ್ನು ಸೌಲನಿಗೆ ಪ್ರತಿಯಾಗಿ ಅರಸನಾದ ನಿನ್ನ ಮೇಲೆ ತಿರುಗಿ ಬರಮಾಡಿ, ರಾಜ್ಯವನ್ನು ನಿನ್ನ ಮಗ ಅಬ್ಷಾಲೋಮನ ಕೈಯಲ್ಲಿ ಒಪ್ಪಿಸಿಕೊಟ್ಟರು. ಏಕೆಂದರೆ ನೀನು ಕೊಲೆಗಾರನಾದುದರಿಂದ, ನಿನ್ನ ಕೇಡಿನಲ್ಲಿ ನೀನು ಸಿಕ್ಕಿಕೊಂಡೆ,” ಎಂದನು.
9ಆಗ ಚೆರೂಯಳ ಮಗ ಅಬೀಷೈಯನು ಅರಸನಿಗೆ, “ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ದೂಷಿಸುವುದೇನು? ನಾನು ದಾಟಿ ಹೋಗಿ ಅವನ ತಲೆಯನ್ನು ತೆಗೆದುಕೊಳ್ಳಲು ಅಪ್ಪಣೆ ಆಗಲಿ,” ಎಂದನು.
10ಆದರೆ ಅರಸನು, “ಚೆರೂಯಳ ಮಕ್ಕಳೇ, ನನಗೂ ನಿಮಗೂ ಏನು? ಅವನು ನನ್ನನ್ನು ದೂಷಿಸಲಿ. ಏಕೆಂದರೆ, ‘ದಾವೀದನನ್ನು ದೂಷಿಸು,’ ಎಂದು ಯೆಹೋವ ದೇವರು ಅವನಿಗೆ ಹೇಳಿದ್ದಾರೆ. ಹಾಗಾದರೆ, ‘ಏಕೆ ಹೀಗೆ ಮಾಡುತ್ತೀ?’ ಎಂದು ಹೇಳುವವನ್ಯಾರು?” ಎಂದನು.
11ದಾವೀದನು ಅಬೀಷೈಯನಿಗೂ, ತನ್ನ ಸಮಸ್ತ ಸೇವಕರಿಗೂ, “ನನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಮಗನು ನನ್ನ ಪ್ರಾಣವನ್ನು ಹುಡುಕಿದರೆ, ಎಷ್ಟೋ ಅಧಿಕವಾಗಿ ಬೆನ್ಯಾಮೀನನಾದವನು ಈಗ ಏನು ಮಾಡಿಯಾನು? ಅವನನ್ನು ಬಿಟ್ಟುಬಿಡಿರಿ. ಅವನು ದೂಷಿಸಲಿ. ಏಕೆಂದರೆ ಯೆಹೋವ ದೇವರು ಅವನಿಗೆ ಹಾಗೆಯೇ ಹೇಳಿದ್ದಾರೆ.
12ಒಂದು ವೇಳೆ ಯೆಹೋವ ದೇವರು ನನ್ನ ಕಷ್ಟವನ್ನು ಕಂಡು, ಈ ದಿನದಲ್ಲಿ ಅವನು ಮಾಡಿದ ಶಾಪಕ್ಕೆ ಪ್ರತಿಯಾಗಿ, ನನಗೆ ಒಳ್ಳೆಯದನ್ನು ಮಾಡಬಹುದು,” ಎಂದನು.
13ದಾವೀದನೂ, ಅವನ ಸೇವಕರೂ ಹಾದಿ ಹಿಡಿದು ಹೋಗುವಾಗ, ಶಿಮ್ಮಿ ಬೆಟ್ಟದ ಓರೆಯಲ್ಲಿ ಬಂದು, ಅವನಿಗೆದುರಾಗಿ ನಡೆದನು. ಅವನು ದಾವೀದನನ್ನು ದೂಷಿಸಿ, ಮಣ್ಣನ್ನು ತೂರಿ, ಕಲ್ಲುಗಳನ್ನು ದಾವೀದನ ಮೇಲೆ ಎಸೆದನು.
14ಅರಸನೂ, ಅವನ ಸಂಗಡದಲ್ಲಿರುವ ಸಮಸ್ತ ಜನರೂ ನಡೆದು ದಣಿದಿದ್ದರಿಂದ ಅಲ್ಲಿ ವಿಶ್ರಮಿಸಿಕೊಂಡರು.
15ಅಬ್ಷಾಲೋಮನೂ, ಇಸ್ರಾಯೇಲರಾದ ಸಮಸ್ತ ಜನರೂ, ಅವನ ಸಂಗಡ ಅಹೀತೋಫೆಲನೂ ಯೆರೂಸಲೇಮಿಗೆ ಬಂದರು.
16ಅರ್ಕಿಯನಾದ ಹೂಷೈಯು ಎಂಬ ದಾವೀದನ ಸ್ನೇಹಿತನು ಅಬ್ಷಾಲೋಮನ ಬಳಿಗೆ ಬಂದಾಗ, ಹೂಷೈ ಅಬ್ಷಾಲೋಮನಿಗೆ, “ಅರಸನು ಬಾಳಲಿ, ಅರಸನು ಬಾಳಲಿ,” ಎಂದನು.
17ಆಗ ಅಬ್ಷಾಲೋಮನು ಹೂಷೈಯಿಗೆ, “ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇಯೇನು? ನೀನು ನಿನ್ನ ಸ್ನೇಹಿತನ ಸಂಗಡ ಏಕೆ ಹೋಗಲಿಲ್ಲ,” ಎಂದನು.
18ಹೂಷೈ ಅಬ್ಷಾಲೋಮನಿಗೆ, “ಹಾಗಲ್ಲ, ಯೆಹೋವ ದೇವರು ಈ ಜನರೂ, ಇಸ್ರಾಯೇಲಿನ ಸಮಸ್ತ ಮನುಷ್ಯರೂ ಯಾರನ್ನು ಆಯ್ದುಕೊಳ್ಳುವರೋ, ನಾನೂ ಅವನ ಪಕ್ಷದವನಾಗಿರುವೆನು. ನಾನು ಅವನ ಬಳಿಯಲ್ಲಿ ಇರುವೆನು.
19ಇದಲ್ಲದೆ ನಾನು ಯಾರನ್ನು ಸೇವಿಸತಕ್ಕದ್ದು? ಅವನ ಮಗನ ಸಮ್ಮುಖದಲ್ಲಿ ಅಲ್ಲವೇ? ನಾನು ನಿನ್ನ ತಂದೆಯ ಸಮ್ಮುಖದಲ್ಲಿ ಹೇಗೆ ಸೇವಿಸಿದೆನೋ ಹಾಗೆಯೇ ನಿನ್ನ ಸಮ್ಮುಖದಲ್ಲಿ ಇರುವೆನು,” ಎಂದನು.
20ಆಗ ಅಬ್ಷಾಲೋಮನು ಅಹೀತೋಫೆಲನಿಗೆ, “ನಾವು ಮಾಡಬೇಕಾದದ್ದನ್ನು ನೀವು ಯೋಚನೆ ಮಾಡಿ ಹೇಳಿರಿ,” ಎಂದನು.
21ಅಹೀತೋಫೆಲನು ಅಬ್ಷಾಲೋಮನಿಗೆ, “ಮನೆಗೆ ಕಾವಲಿಟ್ಟ ನಿನ್ನ ತಂದೆಯ ಉಪಪತ್ನಿಯರ ಸಂಗಡ ಮಲಗು; ಆಗ ನಿನ್ನ ತಂದೆ ನಿನ್ನನ್ನು ತನ್ನ ಶತ್ರುವನ್ನಾಗಿ ಮಾಡಿದನೆಂದು ಎಲ್ಲ ಇಸ್ರಾಯೇಲರಿಗೆ ತಿಳಿಯುವುದು. ಆಗ ನಿನ್ನ ಜನರ ಕೈಗಳೂ ಬಲವಾಗುವುವು,” ಎಂದನು.
22ಹಾಗೆಯೇ ಅವರು ಅಬ್ಷಾಲೋಮನ ಮನೆಯ ಮೇಲೆ ಡೇರೆ ಹಾಕಿದರು. ಅಲ್ಲಿ ಅಬ್ಷಾಲೋಮನು ಸಮಸ್ತ ಇಸ್ರಾಯೇಲರ ಕಣ್ಣುಗಳ ಮುಂದೆ ತನ್ನ ತಂದೆಯ ಉಪಪತ್ನಿಗಳ ಸಂಗಡ ಮಲಗಿದನು.
23ಆ ದಿವಸಗಳಲ್ಲಿ ಅಹೀತೋಫೆಲನು ತಿಳಿಸಿದ ಆಲೋಚನೆಯು ದೇವರನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಗಳನ್ನು ದಾವೀದನೂ, ಅಬ್ಷಾಲೋಮನೂ ಹಾಗೆಯೇ ಗೌರವಿಸುತ್ತಿದ್ದರು.