1ಆಗ ಎಲೀಷನು, “ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ. ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾಳೆ ಹೆಚ್ಚು ಕಡಿಮೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಿಲಲ್ಲಿ ಮೂರು ಕಿಲೋಗ್ರಾಂ ನಯವಾದ ಗೋಧಿಹಿಟ್ಟು ಒಂದು ಬೆಳ್ಳಿ ನಾಣ್ಯಕ್ಕೆ ಮತ್ತು ಆರು ಕಿಲೋಗ್ರಾಂ ಜವೆಗೋಧಿ ಒಂದು ಬೆಳ್ಳಿ ನಾಣ್ಯಕ್ಕೆ ಮಾರಲಾಗುವುದು,” ಎಂದನು.
2ಆಗ ಅರಸನಿಗೆ ಹಸ್ತಕನಾದ ಅಧಿಕಾರಿಯು ದೇವರ ಮನುಷ್ಯನಿಗೆ ಉತ್ತರವಾಗಿ, “ಇಗೋ, ಯೆಹೋವ ದೇವರು ಆಕಾಶದಲ್ಲಿ ಕಿಟಕಿಗಳನ್ನು ಮಾಡಿದರೆ, ಈ ಕಾರ್ಯ ಸಂಭವಿಸುವುದೋ?” ಎಂದನು.
3ಆಗ ಊರು ಬಾಗಿಲ ದ್ವಾರದಲ್ಲಿ ನಾಲ್ಕು ಮಂದಿ ಕುಷ್ಠರೋಗಿಗಳು ಇದ್ದರು. ಅವರು ಒಬ್ಬರಿಗೊಬ್ಬರು, “ನಾವು ಸಾಯುವವರೆಗೂ ಇಲ್ಲಿ ಕುಳಿತುಕೊಂಡಿರುವುದೇನು?
4ನಾವು ಇಲ್ಲಿಯೇ ಇದ್ದರೆ, ಪಟ್ಟಣದಲ್ಲಿ ಬರವಿರುವುದರಿಂದ ಅಲ್ಲಿ ಸಾಯುತ್ತೇವೆ. ಇಲ್ಲಿ ನಾವು ಕುಳಿತಿದ್ದರೂ ಹಾಗೆಯೇ ಸಾಯುತ್ತೇವೆ. ಆದ್ದರಿಂದ ನಾವು ಅರಾಮ್ಯರ ಪಾಳೆಯಕ್ಕೆ ಹೋಗಿ ಅವರಿಗೆ ಶರಣಾಗೋಣ. ಅವರು ನಮ್ಮನ್ನು ಬದುಕಿಸಿದರೆ ಬದುಕುವೆವು, ಅವರು ನಮ್ಮನ್ನು ಕೊಲ್ಲುವುದಾದರೆ ಕೊಲ್ಲಲಿ,” ಎಂದುಕೊಂಡರು.
5ಹಾಗೆಯೇ ಸಂಜೆಯಲ್ಲಿ ಎದ್ದು, ಅರಾಮ್ಯರ ಪಾಳೆಯಕ್ಕೆ ಹೋಗಲು ಅವರು ಅರಾಮ್ಯರ ಪಾಳೆಯದ ಅಂಚಿಗೆ ಬಂದಾಗ, ಅಲ್ಲಿ ಯಾರೂ ಇರಲಿಲ್ಲ.
6ಏಕೆಂದರೆ ಯೆಹೋವ ದೇವರು ಪಾಳೆಯದಲ್ಲಿರುವ ಅರಾಮ್ಯರಿಗೆ ರಥಗಳ, ಕುದುರೆಗಳ ಮತ್ತು ಮಹಾ ಸೈನ್ಯದ ಶಬ್ದವೂ ಕೇಳಿಸುವಂತೆ ಮಾಡಿದ್ದರಿಂದ ಅವರು ಒಬ್ಬರಿಗೊಬ್ಬರು, “ಇಸ್ರಾಯೇಲಿನ ಅರಸನು ಹಿತ್ತಿಯರ ಅರಸರನ್ನೂ, ಈಜಿಪ್ಟಿನ ಅರಸರನ್ನೂ ನಮ್ಮ ಮೇಲೆ ದಾಳಿಮಾಡಲು ಅವರನ್ನು ಕೂಲಿಗೆ ಕರೆದಿದ್ದಾನೆ,” ಎಂದುಕೊಂಡರು.
7ಅವರು ಸಂಜೆಯಲ್ಲಿ ಎದ್ದು ಪಾಳೆಯದಲ್ಲಿದ್ದ ಹಾಗೆ ತಮ್ಮ ಗುಡಾರಗಳನ್ನೂ, ತಮ್ಮ ಕುದುರೆಗಳನ್ನೂ, ತಮ್ಮ ಕತ್ತೆಗಳನ್ನೂ ಬಿಟ್ಟುಬಿಟ್ಟು ತಮ್ಮ ಪ್ರಾಣಕ್ಕೋಸ್ಕರ ಓಡಿಹೋಗಿದ್ದರು.
8ಆ ಕುಷ್ಠರೋಗಿಗಳು ದಂಡಿನ ಅಂಚಿನವರೆಗೂ ಬಂದು ಒಂದು ಡೇರೆಯಲ್ಲಿ ಪ್ರವೇಶಿಸಿ, ಅಲ್ಲಿ ತಿಂದು ಕುಡಿದು ಅಲ್ಲಿದ್ದ ಬೆಳ್ಳಿಬಂಗಾರವನ್ನೂ, ವಸ್ತ್ರಗಳನ್ನೂ ತೆಗೆದುಕೊಂಡುಹೋಗಿ ಬಚ್ಚಿಟ್ಟರು. ತಿರುಗಿಬಂದು ಮತ್ತೊಂದು ಡೇರೆಯಲ್ಲಿ ಪ್ರವೇಶಿಸಿ, ಅಲ್ಲಿಂದಲೂ ಹಾಗೆಯೇ ತೆಗೆದುಕೊಂಡುಹೋಗಿ ಬಚ್ಚಿಟ್ಟರು.
9ಅನಂತರ ಅವರು, “ಇದು ಶುಭವಾರ್ತೆಯ ದಿವಸ, ನಾವು ಇದನ್ನು ಪ್ರಕಟಿಸದಿರುವುದು ಒಳ್ಳೆಯದಲ್ಲ. ಬೆಳಗಾಗುವವರೆಗೆ ತಡಮಾಡಿದರೆ, ಶಿಕ್ಷೆಗೆ ಪಾತ್ರರಾಗಬಹುದು. ಆದ್ದರಿಂದ ಹೋಗಿ ಅರಮನೆಯವರಿಗೆ ಈ ಸಂಗತಿಯನ್ನು ತಿಳಿಸೋಣ,” ಎಂದು ಮಾತನಾಡಿಕೊಂಡರು.
10ಹಾಗೆಯೇ ಅವರು ಬಂದು ಪಟ್ಟಣದ ಬಾಗಿಲು ಕಾಯುವವನನ್ನು ಕರೆದು ಅವನಿಗೆ, “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿ ಬಂದೆವು, ಅಲ್ಲಿ ಯಾರೂ ಕಾಣಿಸಲಿಲ್ಲ, ಮನುಷ್ಯರ ಶಬ್ದವೇ ಕೇಳಿಸಲಿಲ್ಲ. ಕತ್ತೆ ಕುದುರೆಗಳನ್ನು ಅಲ್ಲಲ್ಲಿ ಕಟ್ಟಿಹಾಕಲಾಗಿತ್ತು ಡೇರೆಗಳು ಇದ್ದ ಹಾಗೆಯೇ ಇವೆ,” ಎಂದರು.
11ಅವನು ಬಾಗಿಲು ಕಾಯುವವರನ್ನು ಕರೆದನು. ಅವರು ಒಳಗಿರುವ ಅರಸನ ಮನೆಯವರಿಗೆ ತಿಳಿಸಿದರು.
12ಅರಸನು ರಾತ್ರಿಯಲ್ಲೇ ಎದ್ದು ತನ್ನ ಪರಿವಾರದವರಿಗೆ, “ಅರಾಮ್ಯರ ಹಂಚಿಕೆಯನ್ನು ಹೇಳುತ್ತೇನೆ ಕೇಳಿ. ನಾವು ಹಸಿವೆಯಿಂದ ಸಾಯುವವರಾಗಿದ್ದೇವೆ ಎಂಬುದನ್ನು ಅವರು ಬಲ್ಲರು. ಆದ್ದರಿಂದ ಪಾಳೆಯವನ್ನು ಬಿಟ್ಟು ಹೋಗಿ ಅಡವಿಯಲ್ಲಿ ಅಡಗಿಕೊಂಡಿದ್ದಾರೆ. ನಾವು ಪಟ್ಟಣದಿಂದ ಹೊರಗೆ ಹೋದ ಕೂಡಲೇ ನಮ್ಮನ್ನು ಸಜೀವಿಗಳನ್ನಾಗಿಯೇ ಹಿಡಿದು ಪಟ್ಟಣವನ್ನು ಪ್ರವೇಶಿಸಬೇಕೆಂದಿದ್ದಾರೆ.”
13ಆಗ ಅವನ ಸೇವಕರಲ್ಲಿ ಒಬ್ಬನು ಉತ್ತರವಾಗಿ, “ಪಟ್ಟಣದಲ್ಲಿ ಉಳಿದಿರುವ ಕುದುರೆಗಳಲ್ಲಿ ಐದು ಕುದುರೆಗಳನ್ನು ಕೆಲವರು ತೆಗೆದುಕೊಂಡು ಹೋಗಲಿ. ಅವು ಇಸ್ರಾಯೇಲಿನ ಸಮಸ್ತ ಸಮೂಹದಲ್ಲಿ ಉಳಿದವುಗಳ ಹಾಗೆ ಇವೆ. ಅಂದರೆ ಇಸ್ರಾಯೇಲಿನ ಸಮಸ್ತ ಗುಂಪಿನಲ್ಲಿ ನಾಶವಾಗದೆ ಉಳಿದವುಗಳಂತಿವೆ, ನಾವು ಕಳುಹಿಸಿ ನೋಡೋಣ,” ಎಂದನು.
14ಆದ್ದರಿಂದ ಅವರು ಎರಡು ಜೋಡಿ ಕುದುರೆಗಳೊಂದಿಗೆ ಎರಡು ರಥಗಳನ್ನು ಆರಿಸಿಕೊಂಡರು ಮತ್ತು ಅರಸನು ಅರಾಮ್ಯರ ಸೈನ್ಯದ ಹಿಂದೆ ಅವರನ್ನು ಕಳುಹಿಸಿ, “ಹೋಗಿ ಏನಾಯಿತು ಎಂದು ತಿಳಿದುಕೊಳ್ಳಿ” ಎಂದು ಅವನು ರಾಹುತರಿಗೆ ಆಜ್ಞಾಪಿಸಿದನು.
15ಅವರು ಅವರ ಹಿಂದೆ ಯೊರ್ದನಿನವರೆಗೆ ಹೋದರು. ಮಾರ್ಗದಲ್ಲೆಲ್ಲಾ ಅರಾಮ್ಯರು ಅವಸರದಿಂದ ಬಿಸಾಡಿದ ವಸ್ತ್ರಗಳೂ, ಪಾತ್ರೆಗಳೂ ತುಂಬಿದ್ದವು. ದೂತರು ತಿರುಗಿಬಂದು ಅರಸನಿಗೆ ತಿಳಿಸಿದರು.
16ಆಗ ಜನರು ಹೊರಟುಹೋಗಿ ಅರಾಮ್ಯರ ಡೇರೆಗಳನ್ನು ಸುಲಿದುಕೊಂಡರು. ಆದ್ದರಿಂದ ಯೆಹೋವ ದೇವರ ವಾಕ್ಯದ ಪ್ರಕಾರವೇ ಮೂರು ಕಿಲೋಗ್ರಾಂ ನಯವಾದ ಗೋಧಿಹಿಟ್ಟು ಒಂದು ಬೆಳ್ಳಿ ನಾಣ್ಯಕ್ಕೂ, ಆರು ಕಿಲೋಗ್ರಾಂ ಜವೆಗೋಧಿಯು ಒಂದು ಬೆಳ್ಳಿ ನಾಣ್ಯಕ್ಕೂ ಮಾರಲಾಯಿತು.
17ಆದರೆ ಅರಸನಿಗೆ ಹಸ್ತಕನಾದ ಆ ಅಧಿಕಾರಿಯನ್ನು ಅರಸನು ಪಟ್ಟಣದ ಬಾಗಿಲಿನ ಕಾವಲಿಗೆ ನೇಮಿಸಿದ್ದನು. ಅರಸನು ದೇವರ ಮನುಷ್ಯನ ಬಳಿಗೆ ಬಂದಾಗ, ದೇವರ ಮನುಷ್ಯನು ಹೇಳಿದ್ದ ಪ್ರಕಾರವೇ ಜನರು ಆ ಅಧಿಕಾರಿಯನ್ನು ಪಟ್ಟಣದ ಬಾಗಿಲಲ್ಲಿ ತುಳಿದುಹಾಕಿದ್ದರಿಂದ ಅವನು ಮರಣಹೊಂದಿದನು.
18ಹಾಗೆಯೇ, “ಆರು ಕಿಲೋಗ್ರಾಂ ನಯವಾದ ಗೋಧಿಹಿಟ್ಟು ಒಂದು ಬೆಳ್ಳಿ ನಾಣ್ಯಕ್ಕೆ ಮತ್ತು ಜವೆಗೋಧಿ ಹನ್ನೆರಡು ಕಿಲೋಗ್ರಾಂ ಒಂದು ಬೆಳ್ಳಿ ನಾಣ್ಯಕ್ಕೆ ನಾಳೆ ಇಷ್ಟು ಹೊತ್ತಿಗೆ ಸಮಾರ್ಯ ಪಟ್ಟಣದ ಬಾಗಿಲಿನಲ್ಲಿ ಮಾರಲಾಗುವುದು,” ಎಂದು ದೇವರ ಮನುಷ್ಯನು ಅರಸನಿಗೆ ಹೇಳಿದ ಪ್ರಕಾರವೇ ಸಂಭವಿಸಿತು.
19ಆ ಅಧಿಕಾರಿ ದೇವರ ಮನುಷ್ಯನಿಗೆ ಉತ್ತರವಾಗಿ, “ಇಗೋ, ಯೆಹೋವ ದೇವರು ಆಕಾಶದಲ್ಲಿ ಕಿಟಕಿಗಳನ್ನು ಉಂಟುಮಾಡಿದರೂ, ಸಂಭವಿಸುವುದೋ?” ಎಂದು ನುಡಿದಿದ್ದನು. ಅದಕ್ಕವನು, “ಇಗೋ, ನೀನು ನಿನ್ನ ಕಣ್ಣುಗಳಿಂದ ನೋಡುವೆ, ಆದರೆ ನೀನು ಅದನ್ನು ತಿನ್ನುವುದಿಲ್ಲ,” ಎಂದು ಪ್ರವಾದಿಯು ಹೇಳಿದ್ದನು.
20ಆ ಪ್ರಕಾರವೇ ಅವನಿಗೆ ಸಂಭವಿಸಿತು. ಬಾಗಿಲಲ್ಲಿ ಜನರು ಅವನನ್ನು ತುಳಿದಿದ್ದರಿಂದ ಅವನು ಮರಣಹೊಂದಿದನು.