1ಯಾರೊಬ್ಬಾಮನು ಧೂಪವನ್ನರ್ಪಿಸಲು ಬಲಿಪೀಠದ ಬಳಿಯಲ್ಲಿ ನಿಂತಿರುವಾಗ, ಯೆಹೂದದಿಂದ ಬೇತೇಲಿಗೆ ಯೆಹೋವ ದೇವರ ಮಾತಿನಂತೆ ಒಬ್ಬ ದೇವರ ಮನುಷ್ಯ ಬಂದನು.
2ಅವನು ಯೆಹೋವ ದೇವರ ಅಪ್ಪಣೆಯಿಂದ ಆ ಪೀಠವನ್ನು ಕುರಿತು: “ಪೀಠವೇ, ಪೀಠವೇ! ದಾವೀದನ ಸಂತಾನದಲ್ಲಿ ಯೋಷೀಯ ಎಂಬ ಹೆಸರುಳ್ಳ ಒಬ್ಬ ಮಗನು ಹುಟ್ಟುವನು. ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಪೂಜಾಸ್ಥಳಗಳ ಯಾಜಕರನ್ನು ಹಿಡಿದು ಬಲಿಯಾಗಿ ಅರ್ಪಿಸುವನು. ಮನುಷ್ಯರ ಎಲುಬುಗಳನ್ನು ನಿನ್ನ ಮೇಲೆ ಸುಡಲಾಗುವವು,” ಎಂದು ಯೆಹೋವ ದೇವರು ಹೇಳುತ್ತಾರೆ ಎಂದನು.
3ಅದೇ ದಿವಸದಲ್ಲಿ ಅವನು ಗುರುತನ್ನು ಕೊಟ್ಟು ಅವರಿಗೆ, “ಯೆಹೋವ ದೇವರು ಇದಕ್ಕೆ ಹೇಳಿದ ಗುರುತೇನೆಂದರೆ, ಇಗೋ, ಬಲಿಪೀಠವು ಸೀಳಿಹೋಗಿ, ಅದರ ಮೇಲೆ ಇರುವ ಬೂದಿಯು ಬಿದ್ದುಹೋಗುವುದು,” ಎಂದನು.
4ಅರಸನಾದ ಯಾರೊಬ್ಬಾಮನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿ ದೇವರ ಮನುಷ್ಯನು ಹೇಳಿದ ಮಾತನ್ನು ಕೇಳಿದಾಗ, ಅವನು ಪೀಠದ ಬಳಿಯಿಂದ ತನ್ನ ಕೈಚಾಚಿ, “ಅವನನ್ನು ಹಿಡಿಯಿರಿ,” ಎಂದನು. ಆಗ ಅವನಿಗೆ ವಿರೋಧವಾಗಿ ಚಾಚಿದ ಅವನ ಕೈ ಹಿಂದಕ್ಕೆ ಎಳೆದುಕೊಳ್ಳದ ಹಾಗೆ ಒಣಗಿ ಹೋಯಿತು.
5ಇದಲ್ಲದೆ ಯೆಹೋವ ದೇವರ ಮಾತಿನಿಂದ ದೇವರ ಮನುಷ್ಯನು ಕೊಟ್ಟ ಗುರುತಿನ ಪ್ರಕಾರವೇ ಬಲಿಪೀಠವು ಸೀಳಿಹೋಗಿ, ಬೂದಿಯು ಬಲಿಪೀಠದಿಂದ ಬಿದ್ದುಹೋಯಿತು.
6ಆಗ ಅರಸನು ಉತ್ತರವಾಗಿ ದೇವರ ಮನುಷ್ಯನಿಗೆ, “ನನ್ನ ಕೈ ಗುಣವಾಗುವ ಹಾಗೆ ನೀನು ನಿನ್ನ ದೇವರಾದ ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡು, ನನಗೋಸ್ಕರ ಪ್ರಾರ್ಥನೆ ಮಾಡು,” ಎಂದನು. ಆಗ ದೇವರ ಮನುಷ್ಯನು ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡದ್ದರಿಂದ ಅರಸನ ಕೈಗುಣವಾಗಿ, ಮುಂಚಿನ ಹಾಗೆ ಆಯಿತು.
7ಅರಸನು ದೇವರ ಮನುಷ್ಯನಿಗೆ, “ನೀನು ನನ್ನ ಮನೆಗೆ ಬಂದು ಊಟಮಾಡಿ ವಿಶ್ರಮಿಸಿಕೋ, ನಾನು ನಿನಗೆ ಬಹುಮಾನ ಕೊಡುವೆನು,” ಎಂದನು.
8ಆದರೆ ದೇವರ ಮನುಷ್ಯನು ಅರಸನಿಗೆ ಉತ್ತರವಾಗಿ, “ನೀನು ನನಗೆ ನಿನ್ನ ಅರ್ಧ ಆಸ್ತಿಯನ್ನು ಕೊಟ್ಟರೂ, ನಾನು ನಿನ್ನ ಸಂಗಡ ಹೋಗುವುದಿಲ್ಲ. ಈ ಸ್ಥಳದಲ್ಲಿ ರೊಟ್ಟಿ ತಿನ್ನುವುದಿಲ್ಲ, ಕುಡಿಯುವುದಿಲ್ಲ.
9ಏಕೆಂದರೆ, ‘ನೀನು ರೊಟ್ಟಿ ತಿನ್ನಬೇಡ, ನೀರನ್ನು ಕುಡಿಯಬೇಡ, ನೀನು ಬಂದ ಮಾರ್ಗದಿಂದ ಹಿಂದಿರುಗಿ ಹೋಗಬೇಡ,’ ಎಂದು ಯೆಹೋವ ದೇವರ ವಾಕ್ಯದಿಂದ ನನಗೆ ಆಜ್ಞೆಯಾಗಿದೆ,” ಎಂದನು.
10ಆದ್ದರಿಂದ ಅವನು ಬೇತೇಲಿಗೆ ಬಂದ ಮಾರ್ಗದಿಂದ ಹಿಂದಿರುಗಿ ಹೋಗದೆ, ಮತ್ತೊಂದು ಮಾರ್ಗವಾಗಿ ಹೋದನು.
11ಬೇತೇಲಿನಲ್ಲಿ ಒಬ್ಬ ವೃದ್ಧ ಪ್ರವಾದಿಯು ವಾಸವಾಗಿದ್ದನು. ಅವನ ಮಕ್ಕಳು ಬಂದು ಆ ದಿನದಲ್ಲಿ ಬೇತೇಲಿನಲ್ಲಿ ದೇವರ ಮನುಷ್ಯನು ಮಾಡಿದ ಸಮಸ್ತ ಕ್ರಿಯೆಗಳನ್ನು ಮತ್ತು ಅರಸನಿಗೆ ಹೇಳಿದ ಮಾತುಗಳನ್ನು ತಮ್ಮ ತಂದೆಗೆ ತಿಳಿಸಿದರು.
12ಆಗ ಅವರ ತಂದೆ ಅವರಿಗೆ, “ಅವನು ಯಾವ ಮಾರ್ಗವಾಗಿ ಹೋದನು,” ಎಂದನು. ಯೆಹೂದದಿಂದ ಬಂದ ದೇವರ ಮನುಷ್ಯನು ಹೋದ ಮಾರ್ಗವನ್ನು ಅವನ ಮಕ್ಕಳಿಗೆ ತೋರಿಸಿದರು.
13ಆದ್ದರಿಂದ ಅವನು ತನ್ನ ಮಕ್ಕಳಿಗೆ, “ಕತ್ತೆಗೆ ತಡಿ ಹಾಕಿರಿ,” ಎಂದನು. ಅವರು ಕತ್ತೆಗೆ ತಡಿ ಹಾಕಿದರು. ಅವನು ಅದರ ಮೇಲೆ ಏರಿ,
14ದೇವರ ಮನುಷ್ಯನ ಹಿಂದೆ ಹೋಗಿ, ಅವನು ಏಲಾ ಮರದ ಕೆಳಗೆ ಕುಳಿತುಕೊಂಡಿರುವುದನ್ನು ಕಂಡನು. ಆಗ ಅವನು, “ನೀನು ಯೆಹೂದದಿಂದ ಬಂದ ದೇವರ ಮನುಷ್ಯನೋ?” ಎಂದನು.
15ಆಗ ವೃದ್ಧ ಪ್ರವಾದಿಯು ಅವನಿಗೆ, “ನೀನು ನನ್ನ ಮನೆಗೆ ಬಂದು ರೊಟ್ಟಿ ತಿನ್ನು,” ಎಂದನು.
16ಅದಕ್ಕವನು, “ನಾನು ನಿನ್ನ ಸಂಗಡ ಹಿಂದಿರುಗಲೂ ಕೂಡದು, ಹೋಗಲೂ ಕೂಡದು. ಈ ಸ್ಥಳದಲ್ಲಿ ನಿನ್ನ ಸಂಗಡ ರೊಟ್ಟಿ ತಿನ್ನುವುದಿಲ್ಲ, ನೀರು ಕುಡಿಯುವುದಿಲ್ಲ.
17ಏಕೆಂದರೆ, ‘ನೀನು ಅಲ್ಲಿ ರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ, ಬಂದ ಮಾರ್ಗದಿಂದ ತಿರುಗಿ ಹೋಗಬೇಡ,’ ಎಂದು ಯೆಹೋವ ದೇವರ ಮಾತಿನಿಂದ ನನಗೆ ಅಪ್ಪಣೆಯಾಗಿದೆ,” ಎಂದನು.
18ಆಗ ವೃದ್ಧನು, “ನಾನು ನಿನ್ನ ಹಾಗೆಯೇ ಪ್ರವಾದಿಯಾಗಿದ್ದೇನೆ. ಒಬ್ಬ ದೇವದೂತನ ಮುಖಾಂತರ ನನಗೆ ಯೆಹೋವ ದೇವರ ವಾಕ್ಯವು ಉಂಟಾಗಿ, ನಿನ್ನನ್ನು ಹಿಂದಕ್ಕೆ ಕರಕೊಂಡು ಬರಬೇಕೆಂದೂ ನಿನಗೆ ಅನ್ನಪಾನಗಳನ್ನು ಕೊಡಬೇಕೆಂದೂ ಆಜ್ಞೆಯಾಗಿದೆ ಎಂದು ಹೇಳಿದನು.” ಆದರೆ ವೃದ್ಧನು ಅವನಿಗೆ ಸುಳ್ಳು ಹೇಳಿದನು.
19ಹಾಗೆಯೇ ದೇವರ ಮನುಷ್ಯನು ವೃದ್ಧನ ಸಂಗಡ ಹಿಂದಿರುಗಿ ಹೋಗಿ, ಅವನ ಮನೆಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡನು.
20ಅವರು ಊಟಕ್ಕೆ ಕುಳಿತಿರುವಾಗ, ಅವನನ್ನು ಹಿಂದಕ್ಕೆ ಕರೆತಂದ ವೃದ್ಧ ಪ್ರವಾದಿಗೆ ಯೆಹೋವ ದೇವರ ವಾಕ್ಯವು ಉಂಟಾಗಿ,
21ಅವನು ಯೆಹೂದ ದೇಶದವನಾದ ಆ ದೇವರ ಮನುಷ್ಯನಿಗೆ, “ನೀನು ಯೆಹೋವ ದೇವರ ಮಾತಿಗೆ ತಿರುಗಿಬಿದ್ದು, ನಿನ್ನ ದೇವರಾದ ಯೆಹೋವ ದೇವರು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಗೊಳ್ಳದೆ, ಹಿಂದಕ್ಕೆ ಬಂದು, ‘ರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ,’ ಎಂದು ಯೆಹೋವ ದೇವರು ನಿನಗೆ ಹೇಳಿದ ಸ್ಥಳದಲ್ಲಿ
22ನೀನು ಹಿಂದಿರುಗಿ ಬಂದು, ನೀನು ರೊಟ್ಟಿ ತಿಂದು, ನೀರು ಕುಡಿದಿದ್ದರಿಂದ, ನಿನ್ನ ಹೆಣ ನಿನ್ನ ಪಿತೃಗಳ ಸಮಾಧಿಗೆ ಸೇರುವುದಿಲ್ಲವೆಂದು ಯೆಹೋವ ದೇವರು ಹೇಳುತ್ತಾರೆ,” ಎಂದು ಹೇಳಿದನು.
23ದೇವರ ಮನುಷ್ಯನು ರೊಟ್ಟಿ ತಿಂದು, ನೀರು ಕುಡಿದ ತುರುವಾಯ, ಅವನು ತಾನು ಕರೆದುತಂದ ಪ್ರವಾದಿಗೋಸ್ಕರ ಕತ್ತೆಗೆ ತಡಿ ಹಾಕಿದನು.
24ಅವನು ಹೋದ ತರುವಾಯ, ಸಿಂಹವು ಅವನನ್ನು ದಾರಿಯಲ್ಲಿ ಹಿಡಿದು ಕೊಂದುಹಾಕಿತು. ಅವನ ಹೆಣ ದಾರಿಯಲ್ಲಿ ಬಿದ್ದಿತ್ತು. ಕತ್ತೆಯೂ ಮತ್ತು ಸಿಂಹವೂ ಹೆಣದ ಬಳಿಯಲ್ಲಿ ನಿಂತಿದ್ದವು.
25ಆಗ ಮನುಷ್ಯರು ಹಾದು ಹೋಗಿ ಮಾರ್ಗದಲ್ಲಿ ಬಿದ್ದಿರುವ ಹೆಣವನ್ನೂ, ಹೆಣದ ಬಳಿಯಲ್ಲಿ ನಿಂತಿರುವ ಸಿಂಹವನ್ನೂ ಕಂಡು, ವೃದ್ಧ ಪ್ರವಾದಿಯು ವಾಸವಾಗಿರುವ ಪಟ್ಟಣಕ್ಕೆ ಬಂದು ತಿಳಿಸಿದರು.
26ಅವನನ್ನು ಮಾರ್ಗದಿಂದ ಹಿಂದಕ್ಕೆ ಕರೆತಂದ ಪ್ರವಾದಿಯು ಆ ವರ್ತಮಾನವನ್ನು ಕೇಳಿ, “ಇವನೇ ಯೆಹೋವ ದೇವರ ಮಾತಿಗೆ ಅವಿಧೇಯನಾದ ದೇವರ ಮನುಷ್ಯನು, ಯೆಹೋವ ದೇವರು ಅವನನ್ನು ಸಿಂಹಕ್ಕೆ ಒಪ್ಪಿಸಿದ್ದಾರೆ, ಅದು ಅವನನ್ನು ಸೀಳಿ ಕೊಂದುಹಾಕಿತು,” ಎಂದನು.
27ತನ್ನ ಮಕ್ಕಳಿಗೆ, “ಕತ್ತೆಗೆ ತಡಿ ಹಾಕಿರಿ,” ಎಂದನು. ಅವರು ತಡಿ ಹಾಕಿದರು.
28ಅವನು ಹೋಗಿ ಇವನ ಹೆಣವು ದಾರಿಯಲ್ಲಿ ಬಿದ್ದಿರುವುದನ್ನೂ, ಕತ್ತೆಯೂ, ಸಿಂಹವೂ ಹೆಣದ ಬಳಿಯಲ್ಲಿ ನಿಂತಿರುವುದನ್ನೂ ಕಂಡನು.
29ಸಿಂಹವು ಹೆಣವನ್ನು ತಿನ್ನದೆ, ಕತ್ತೆಯನ್ನು ಸೀಳಿ ಹಾಕದೆ ಇತ್ತು. ಆಗ ಪ್ರವಾದಿಯು ದೇವರ ಮನುಷ್ಯನ ಹೆಣವನ್ನು ಎತ್ತಿ, ಕತ್ತೆಯ ಮೇಲೆ ಹಾಕಿಕೊಂಡು ಗೋಳಾಡುವುದಕ್ಕೂ, ಅವನನ್ನು ಹೂಳುವುದಕ್ಕೂ ಪಟ್ಟಣಕ್ಕೆ ತಂದನು.
30ಅವನ ಹೆಣವನ್ನು ತನ್ನ ಸಮಾಧಿಯಲ್ಲಿ ಹೂಳಿಟ್ಟನು. ಆಗ ಅವರು, “ಅಯ್ಯೋ, ನಮ್ಮ ಸಹೋದರನೇ!” ಎಂದು ಅವನಿಗೋಸ್ಕರ ಗೋಳಾಡಿದರು.
31ವೃದ್ಧ ಪ್ರವಾದಿಯು ಅವನನ್ನು ಹೂಳಿಟ್ಟ ತರುವಾಯ, ಅವನು ತನ್ನ ಮಕ್ಕಳಿಗೆ, “ನಾನು ಸತ್ತಾಗ ದೇವರ ಮನುಷ್ಯನನ್ನು ಹೂಳಿಟ್ಟ ಸಮಾಧಿಯಲ್ಲಿ ನನ್ನನ್ನು ಹೂಳಿಡಿರಿ. ನನ್ನ ಎಲುಬುಗಳನ್ನು ಅವನ ಎಲುಬುಗಳ ಬಳಿಯಲ್ಲಿ ಇಡಿರಿ.
32ಏಕೆಂದರೆ ಅವನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿಯೂ, ಸಮಾರ್ಯ ಪಟ್ಟಣಗಳಲ್ಲಿರುವ ಪೂಜಾಸ್ಥಳಗಳ ಸಮಸ್ತ ಮನೆಗಳಿಗೆ ವಿರೋಧವಾಗಿಯೂ, ಯೆಹೋವ ದೇವರ ಮಾತಿನಿಂದ ಕೂಗಿದ ಮಾತು ನಿಶ್ಚಯವಾಗಿ ಆಗುವುದು,” ಎಂದನು.
33ಈ ಕಾರ್ಯದ ತರುವಾಯ ಯಾರೊಬ್ಬಾಮನು ತನ್ನ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗದೆ, ಪೂಜಾ ಸ್ಥಳಗಳಿಗೆ ಕನಿಷ್ಠ ಜನರಿಂದ ಪುನಃ ಯಾಜಕರನ್ನು ನೇಮಿಸಿದನು. ಯಾವನಿಗೆ ಮನಸ್ಸಿತ್ತೋ ಅವನನ್ನು ಇವನು ಪ್ರತಿಷ್ಠೆ ಮಾಡಿಸಿದ್ದರಿಂದ, ಪೂಜಾಸ್ಥಳಗಳ ಯಾಜಕರಲ್ಲಿ ಅವನು ಒಬ್ಬನಾಗುವನು.
34ಯಾರೊಬ್ಬಾಮನ ಮನೆಯವರನ್ನು ಭೂಮಿಯಿಂದ ಸಂಹರಿಸುವುದಕ್ಕೂ, ನಾಶಮಾಡುವುದಕ್ಕೂ ಈ ಪಾಪವು ಅವರಿಗೆ ಕಾರಣವಾಯಿತು.